ಅಮೃತದ ಕಡಲು ಗೋವಿನೊಡಲು
|| ಭಾಮಿನಿ ಷಟ್ಪದಿ ||
ಎತ್ತಿದಾ ಕೂರಸಿಯು ಕತ್ತರಿ |
ಸಿತ್ತು ಗೋವಿನ ಕುಸುಮ ಕತ್ತನು |
ನೆತ್ತರಿನ ಹೊಳೆ ಹರಿದು ಹೋಯಿತು | ಅತ್ತವರ ಕಾಣೆ ||
ನೆತ್ತಿಯಂಚಿನ ಕತ್ತಿಯರಿಯದೆ |
ವಿತ್ತಕಷ್ಟೇ ಚಿತ್ತವಾಯಿತು |
ಮತ್ತಜನರರಿಯದೆಯೆ ಕೊಲುವರು | ಸುತ್ತುತಿಹ ಸಾವ! || 1 ||
ದಯೆಯೆ ಧರ್ಮದ ಮೂಲವೆಂಬರು |
ದಯೆಯ ಮರೆಯುತ ಕೊಂದು ಕಳೆವರು |
ದಯೆಯ ಪರಿಧಿಗೆ ಭಯದ ಪರದೆಯನೆಳೆದು ಮೆರೆಯುವರು ||
ಜಯತು ಜಯವೆಂದೊರೆವ ಜನಕಪ |
ಜಯವ ಹಾರೈಸುತಲಿ ನಡೆವರ |
ಪಯಣದಲಿ ತಿರುತಿರುಗಿ ಕಂಡರೆ ಪಾಪದಾ ಮೂಟೆ! || 2 ||
ಚಿಕ್ಕ ಹೊನ್ನಿನ ತತ್ತಿಯಿಕ್ಕಿದ |
ಕುಕ್ಕುಟವ ನರನೋರ್ವನಾರ್ಜಿಸೆ |
ಹೊಕ್ಕಿತಾಸೆಯು ಗರ್ಭದೊಳಗಿನ್ನೇಸು ಇಹುದೆನುತ ||
ಸಿಕ್ಕದಾಯಿತು ದಕ್ಕದಾಯಿತು |
ಮಕ್ಕಳಾಟಿಕೆಯಾಗಿ ಹೋಯಿತು |
ಸೊಕ್ಕಿನಿಂ ಗೋವನ್ನು ಕೊಂದರೆ ನೀನು ಇಂತಪ್ಪೆ
|| 3 ||
ಹಾಲನುರೆ ಚಪ್ಪರಿಸುತೀಜನ |
ಹಾಲನಿತ್ತಾಕೆಯನೆ ಕಡಿವರು |
ಬಾಳ ಬೆಲೆಯೆಷ್ಟರ್ಥವಾಪುದು ಬಾಳ ಕುರುಡರಿಗೆ? ||
ಕಾಲನೆಳೆವರು ಗೋಣ ಮುರಿವರು |
ಕಾಳಿನಷ್ಟೂ ನಲ್ಮೆದೋರರು |
ಹೇಳಿರೈ ನೀವ್ ತಡೆಯಿರೈ ನೀವ್ ನರಕ ನಿಮಗೆನುತ || 4 ||
ಮೊಸರು ಮಜ್ಜಿಗೆ ಹಾಲು ತುಪ್ಪದ |
ರಸವ ಹೀರುತಲುದಯಿಸಿದ ಜನ |
ಪಶುವಿನುದರವ ಬಗೆವ ಪರಿಯನು ಕಾಣೆನೀಜಗದಿ ||
ಕುಶಲದಿಂದಾ ಪಶುವ ಸಲಹಲು |
ಬಿಸಜಸುತನುರಿಗಣ್ಣ ಮುರರಿಪು |
ಜಸವನೆರೆವರು ಕುಂಭಿನಿಯೊಳೀ ನುಡಿಯು ಕಡುದಿಟವು || 5 ||
- ಶಿವಕುಮಾರ ಬಿ.ಎ. ಅಳಗೋಡು
ಕನ್ನಡ ಉಪನ್ಯಾಸಕರು, ಪಿ.ಪಿ.ಸಿ