ಶುಕ್ರವಾರ, ಅಕ್ಟೋಬರ್ 6, 2017






ಅಮೃತದ ಕಡಲು ಗೋವಿನೊಡಲು

|| ಭಾಮಿನಿ ಷಟ್ಪದಿ ||

ಎತ್ತಿದಾ ಕೂರಸಿಯು ಕತ್ತರಿ | 
ಸಿತ್ತು ಗೋವಿನ ಕುಸುಮ ಕತ್ತನು |
ನೆತ್ತರಿನ ಹೊಳೆ ಹರಿದು ಹೋಯಿತು | ಅತ್ತವರ ಕಾಣೆ || 
ನೆತ್ತಿಯಂಚಿನ ಕತ್ತಿಯರಿಯದೆ | 
ವಿತ್ತಕಷ್ಟೇ ಚಿತ್ತವಾಯಿತು |
ಮತ್ತಜನರರಿಯದೆಯೆ ಕೊಲುವರು | ಸುತ್ತುತಿಹ ಸಾವ! || 1 ||

ದಯೆಯೆ ಧರ್ಮದ ಮೂಲವೆಂಬರು | 
ದಯೆಯ ಮರೆಯುತ ಕೊಂದು ಕಳೆವರು |
ದಯೆಯ ಪರಿಧಿಗೆ ಭಯದ ಪರದೆಯನೆಳೆದು ಮೆರೆಯುವರು ||
ಜಯತು ಜಯವೆಂದೊರೆವ ಜನಕಪ | 
ಜಯವ ಹಾರೈಸುತಲಿ ನಡೆವರ |
ಪಯಣದಲಿ ತಿರುತಿರುಗಿ ಕಂಡರೆ ಪಾಪದಾ ಮೂಟೆ! || 2 ||

ಚಿಕ್ಕ ಹೊನ್ನಿನ ತತ್ತಿಯಿಕ್ಕಿದ | 
ಕುಕ್ಕುಟವ ನರನೋರ್ವನಾರ್ಜಿಸೆ |
ಹೊಕ್ಕಿತಾಸೆಯು ಗರ್ಭದೊಳಗಿನ್ನೇಸು ಇಹುದೆನುತ ||
ಸಿಕ್ಕದಾಯಿತು ದಕ್ಕದಾಯಿತು | 
ಮಕ್ಕಳಾಟಿಕೆಯಾಗಿ ಹೋಯಿತು |
ಸೊಕ್ಕಿನಿಂ ಗೋವನ್ನು ಕೊಂದರೆ ನೀನು ಇಂತಪ್ಪೆ


 || 3 ||

ಹಾಲನುರೆ ಚಪ್ಪರಿಸುತೀಜನ | 
ಹಾಲನಿತ್ತಾಕೆಯನೆ ಕಡಿವರು |
ಬಾಳ ಬೆಲೆಯೆಷ್ಟರ್ಥವಾಪುದು ಬಾಳ ಕುರುಡರಿಗೆ? || 
ಕಾಲನೆಳೆವರು ಗೋಣ ಮುರಿವರು | 
ಕಾಳಿನಷ್ಟೂ ನಲ್ಮೆದೋರರು |
ಹೇಳಿರೈ ನೀವ್ ತಡೆಯಿರೈ ನೀವ್ ನರಕ ನಿಮಗೆನುತ || 4 ||

ಮೊಸರು ಮಜ್ಜಿಗೆ ಹಾಲು ತುಪ್ಪದ | 
ರಸವ ಹೀರುತಲುದಯಿಸಿದ ಜನ |
ಪಶುವಿನುದರವ ಬಗೆವ ಪರಿಯನು ಕಾಣೆನೀಜಗದಿ ||
ಕುಶಲದಿಂದಾ ಪಶುವ ಸಲಹಲು | 
ಬಿಸಜಸುತನುರಿಗಣ್ಣ ಮುರರಿಪು |
ಜಸವನೆರೆವರು ಕುಂಭಿನಿಯೊಳೀ ನುಡಿಯು ಕಡುದಿಟವು || 5 ||

- ಶಿವಕುಮಾರ ಬಿ.ಎ. ಅಳಗೋಡು
 ಕನ್ನಡ ಉಪನ್ಯಾಸಕರು, ಪಿ.ಪಿ.ಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ